ಭಾಗ -೨೫




मूलम् -

शिश्य उवाच -

कृपया श्रुयतां स्वामिन् प्रश्नोयं क्रियते मया |
यदुत्तरमहं श्रुत्वा कृतार्थः स्यां भवन्मुखात् ||४९||

ಮೂಲ :

ಶಿಷ್ಯನು ಹೇಳಿದನು :
-
ಕೃಪಯಾ ಶ್ರುಯತಾಂ ಸ್ವಾಮಿನ್ ಪ್ರಶ್ನೋಯಂ ಕ್ರಿಯತೇ ಮಯಾ |
ಯದುತ್ತರಮಹಂ ಶ್ರುತ್ವಾ ಕೃತಾರ್ಥಃ ಸ್ಯಾಂ ಭವನ್ಮುಖಾತ್ ||೪೯||

ಪ್ರತಿಪದಾರ್ಥ :

( ಸ್ವಾಮಿನ್ , ಮಯಾ = ಸ್ವಾಮಿ, ನನ್ನಿಂದ, ಅಯಂ ಪ್ರಶ್ನಃ = ಈ ಪ್ರಶ್ನೆಯು, ಕ್ರಿಯತೇ = ಕೇಳಲಾಗುತ್ತದೆ (ಮಾಡಲಾಗುತ್ತದೆ), ಕೃಪಯಾ = ಕರುಣೆಯಿಂದ, ಶ್ರೂಯತಾಂ = ಕೇಳಿಸಿಕೊಳ್ಳಿ ; ಅಹಂ = ನಾನು, ಭವನ್ಮುಖಾತ್ = ನಿಮ್ಮ ಬಾಯಿಂದ, ಯದುತ್ತರಂ = ಯಾವ ಉತ್ತರವನ್ನು , ಶ್ರುತ್ವಾ = ಕೇಳಿ , ಕೃತಾರ್ಥಃ ಸ್ಯಾಂ = ಧನ್ಯನಾಗುವೆನೊ )

ತಾತ್ಪರ್ಯ :

ಶಿಷ್ಯನು ಹೇಳಿದನು : ಹೇ ಸ್ವಾಮಿಯೇ , ನಾನು ಕೇಳುವ ಪ್ರಶ್ನೆಯನ್ನು ಕರುಣೆಯಿಂದ ಕೇಳಿಸಿಕೊಳ್ಳಿ. ನಿಮ್ಮ ಬಾಯಿಂದ ನನ್ನ ಪ್ರಶ್ನೆಗಳಿಗೆ ಯಾವ ಉತ್ತರವು ಬರುವುದೋ ಅದನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ.

ವಿವರಣೆ :

ಶಿಷ್ಯನ ಭಯವನ್ನು ದೂರಮಾಡಿ ಮತ್ತು ಭಯಕ್ಕೆ ಕಾರಣಗಳನ್ನು ತಿಳಿಸಿದ ಬಳಿಕ ಶಿಷ್ಯ‌(ಅಧಿಕಾರಿ)ನಿಗೆ ಬ್ರಹ್ಮದ ಬಗೆಗೆ ತಿಳಿದುಕೊಳ್ಳಲು ಆಸಕ್ತಿಯುಂಟಾಗುತ್ತದೆ. ಅದಕ್ಕಾಗಿ ಶಿಷ್ಯನು ಗುರುವಿನ ಬಳಿ ತನಗೆ ಬೇಕಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಪ್ರಶ್ನೆಯನ್ನು ಕೇಳುವುದಕ್ಕೂ ಮೊದಲು ಗುರುವಿನ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು ' ನಾನು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ, ದಯಮಾಡಿ ಆಲಿಸಿ. ನಿಮ್ಮಿಂದ ಯಾವ ಉತ್ತರಗಳು ಬರುತ್ತವೆಯೋ ಅವುಗಳನ್ನು ನಾನು ವಿನಯದಿಂದ ಕೇಳಿಸಿಕೊಳ್ಳುತ್ತೇನೆ' ಎಂಬ ಒಳ್ಳೆಯ ಮಾತುಗಳನ್ನು ಹೇಳುತ್ತಾನೆ. ಪ್ರಶ್ನೆಯನ್ನು ಕೇಳುವುದಕ್ಕೂ ಮೊದಲು ಗುರುವಿನ ಅನುಮತಿಯನ್ನು ಪಡೆಯಬೇಕೆನ್ನುವ ಸಾಮಾನ್ಯಜ್ಞಾನವನ್ನು ಶಿಷ್ಯನು ಇಟ್ಟುಕೊಳ್ಳಬೇಕು ಎನ್ನುವುದನ್ನು ಇಲ್ಲಿ ಗಮನಿಸಬಹುದು. ಶಾಲೆಗಳಲ್ಲಿ ಮಕ್ಕಳು ಸಂದೇಹಗಳು ಬಂದಾಗ "Shall I ask a question Madam/Sir “ ಎಂದು ಬೆರೆಳೆತ್ತಿ ಕೇಳಿ ನಂತರ ಪ್ರಶ್ನೆ ಕೇಳುವ ಅಭ್ಯಾಸವನ್ನು ಕಂಡಿರುತ್ತೇವೆ. ಇದು ಮಾದರಿಯಾಗುವಂತಹುದು. ಗುರುವೇನೊ ಕುಳಿತಿದ್ದಾನೆ, ಸರಕಾರ/ಸಂಸ್ಥೆಯು ಸಂಬಳ ಕೊಡುತ್ತದೆ. ಕೇಳಿದರೆ ತೆಪ್ಪಗೆ ಹೇಳದೆ ಇನ್ನೇನು ಮಾಡಿಯಾನು ?! ಎಂಬ ಧೋರಣೆಯೂ ಅನೇಕ ಕಡೆ ಇರುವುದನ್ನು ಕಂಡಿರುತ್ತೇವೆ. ಯಾವುದು ಒಳ್ಳೆಯದು ಎನ್ನುವುದನ್ನು ಆಚಾರ್ಯರು ಸೂಕ್ಷ್ಮವಾಗಿ ಇಲ್ಲಿ ತಿಳಿಸಿರುತ್ತಾರೆ . ಇಲ್ಲೂ ಸಹ ಗೀತೆಯ "ಪರಿಪ್ರಶ್ನೇನ ಸೇವಯಾ " ಎಂಬ ವಾಕ್ಯವನ್ನು ನೆನೆಯಬಹುದು.

ಅಪ್ಪಣೆಯನ್ನು ಕೇಳಿದ ನಂತರ ಶಿಷ್ಯನು ತನ್ನ ಪ್ರಶ್ನೆಗಳನ್ನು ಗುರುವಿನ ಮುಂದಿಡುತ್ತಾನೆ. ಇಲ್ಲಿಂದ ಪ್ರಶ್ನೋತ್ತರ ಸಂವಾದಗಳ ಮೂಲಕ ಆತ್ಮಜ್ಞಾನದ ಪಾಠವು ಆರಂಭವಾಗುತ್ತದೆ.

मूलम् :

को नाम बन्धः कथमेष आगतः कथं प्रतिष्ठास्य कथं विमोक्षः |
कोsसावनात्मा परमः क आत्मा तयोर्विवेकः कथमेतदुच्यताम् ||५०||

ಮೂಲ:

ಕೋ ನಾಮ ಬಂಧಃ ಕಥಮೇಷ ಆಗತಃ ಕಥಂ ಪ್ರತಿಷ್ಠಾಸ್ಯಃ ಕಥಂ ವಿಮೋಕ್ಷಃ |
ಕೊsಸಾವನಾತ್ಮಾ ಪರಮಃ ಕ ಆತ್ಮಾ ತಯೋರ್ವಿವೇಕಃ ಕಥಮೇತದುಚ್ಯತಾಮ್ ||೫೦||

ಪ್ರತಿಪದಾರ್ಥ :

(ಬಂಧಃ = ಬಂಧವೆಂಬುದು (ಸೆರೆ, ಚೌಕಟ್ಟು) , ಕಃ ನಾಮ = ಯಾವುದು ? , ಏಷಃ = ಇದು , ಕಥಂ = ಹೇಗೆ, ಆಗತಃ = ಬಂದಿರುವುದು, ಅಸ್ಯ = ಇದರ , ಪ್ರತಿಷ್ಠಾ = ನೆಲೆಯು , ಕಥಂ = ಹೇಗೆ ? (ಯಾವುದು ?), ವಿಮೋಕ್ಷಃ = ಬಿಡುಗಡೆಯು = , ಕಥಂ = ಹೇಗೆ? , ಅನಾತ್ಮಾ = ಅನಾತ್ಮವು , ಕಃ ಅಸೌ = ಯಾವುದು ? , ಪರಮಃ ಆತ್ಮಾ = ಪರಮಾತ್ಮನು , ಕಃ = ಯಾರು ? , ತಯೋಃ = ಇವರಿಬ್ಬರ , ವಿವೇಕಃ = ವಿವೇಚನೆಯು (ಅರಿವು), ಕಥಂ = ಹೇಗೆ ? , ಏತತ್ = ಇದು , ಉಚ್ಯತಾಂ = ಹೇಳುವಂತಹವರಾಗಿ (ಹೇಳಿ) . )

ತಾತ್ಪರ್ಯ :

ಬಂಧವೆಂಬುದು ಯಾವುದು ? ಇದು ಹೇಗೆ ಬಂದಿದೆ ? ಇದು ನೆಲೆಗೊಂಡಿರುವುದು ಹೇಗೆ ? ಇದರಿಂದ ಬಿಡುಗಡೆಯಾಗುವುದು ಹೇಗೆ ? ಅನಾತ್ಮವಸ್ತುವು ಯಾವುದು ? ಪರಮಾತ್ಮನು (ಆತ್ಮವಸ್ತು) ಯಾರು ? ಇವೆರೆಡನ್ನೂ ತಿಳಿಯುವುದು (ವಿವೇಚಿಸುವುದು) ಹೇಗೆ ? ಈ ವಿಷಯವನ್ನು ಹೇಳಬೇಕು.

ವಿವರಣೆ :

ಇಲ್ಲಿ ಶಿಷ್ಯನ ಪ್ರಶ್ನೆಗಳನ್ನು ಗಮನಿಸಿದಾಗ ಕಂಡುಬರುವ ಮುಖ್ಯ ಅಂಶವೆಂದರೆ ಪ್ರಶ್ನೆಗಳಲ್ಲಿರುವ ನಿಚ್ಚಳತೆ. ತುಂಬ ನೇರವಾಗಿ ಸ್ಪಷ್ಟವಾಗಿ ತನಗೆ ಬೇಕಾದ ವಿಷಯವನ್ನು ಕುರಿತು ಕೇಳಿರುವ ಪ್ರಶ್ನೆಗಳಿವು. ಇಲ್ಲಿ ಸಂದೇಹಕ್ಕೆ ಆಸ್ಪದವಿಲ್ಲ. ಸಂದೇಹವು ಪ್ರಶ್ನೆಯಾಗಲಾರದು. ಸಂದೇಹಕ್ಕೆ ನಾನಾ ದಿಕ್ಕುಗಳಿರುತ್ತವೆ. ಸಂದೇಹವು ಪ್ರಶ್ನೆಯಾಗಬೇಕಾದರೆ ಕೊಂಚ ದಾರಿಯನ್ನು ಸವೆಸಿ ಬರಬೇಕಾಗುತ್ತದೆ. ಅಚ್ಚುಕಟ್ಟಾದ ಪ್ರಶ್ನೆಯಲ್ಲಿಯೇ ಅರ್ಧ ಉತ್ತರವೂ ಅಡಗಿರುತ್ತದೆ. ಉತ್ತರ ಹೇಳುವವರಿಗೂ ಸಲೀಸಾಗುತ್ತದೆ. ಶಿಷ್ಯನಿಗೆ ತಾನು ತಿಳಿದುಕೊಳ್ಳಬೇಕಾಗಿರುವ ವಿಚಾರದ ಬಗ್ಗೆ ಸ್ಪಷ್ಟತೆಯಿದೆ, ಹಾಗಾಗಿ ಉತ್ತಮ ಪ್ರಶ್ನೆಗಳು ಆತನಿಂದ ಬಂದಿವೆ ಎಂದು ತಿಳಿಯಬೇಕಾಗುತ್ತದೆ. ಬಂಧದ ಮೂಲವನ್ನು ಕೇಳುವುದರೊಟ್ಟಿಗೆ ಆತ್ಮನಾತ್ಮ ವಸ್ತುಗಳನ್ನು ಬೇರೆಬೇರೆಯಾಗಿ ತಿಳಿಯುವುದು ಹೇಗೆ ? ಎಂಬ ಪ್ರಶ್ನೆಯನ್ನೂ ಶಿಷ್ಯನು ಕೇಳುತ್ತಾನೆ.

ನಾವು ಯಾವುದಾದರೂ ಐತಿಹಾಸಿಕ/ಪೌರಾಣಿಕ ಸ್ಥಳಕ್ಕೆ ಭೇಟಿಕೊಟ್ಟಾಗ ಸ್ಥಳಿಯರನ್ನು "ಈ ಸ್ಥಳದ ಬಗೆಗೆ ಏನಾದರೂ ಸ್ವಲ್ಪ ಹೇಳಿ " ಎಂದು ಕೇಳುತ್ತೇವೆ. ಏನಾದರೂ ಹೇಳಿ ಎಂದರೆ ಅವರು ಏನು ಹೇಳಿಯಾರು ? ಎಲ್ಲಿಂದ ಮೊದಲಿಟ್ಟಾರು ? ಏನನ್ನು ಹೇಳಬೇಕು ಎಂಬ ಗೊಂದಲವೂ ಅವರಿಗೆ ಮೂಡಿಬರಬಹುದು.
ಅದರ ಹೊರತು "ಈ ಊರಿನ ಹೇಸರೇನು ? ಇದಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆ ? ಈ ಸ್ಮಾರಕವನ್ನು ಕಟ್ಟಿದವರಾರು ? ಇಲ್ಲಿಯ ಪ್ರಮುಖ ಬೆಳೆ ಯಾವುದು ? , ಹೀಗೆ ಸರಿಯಾದ ಪ್ರಶ್ನೆಗಳನ್ನು ಕೇಳುವುದರಿಂದ ಹೇಳುವವರಿಗೂ ಅನುಕೂಲವಾಗುತ್ತದೆ.

ಶಿಷ್ಯನ ಪ್ರಶ್ನೆಯಲ್ಲಿ ಸ್ಪಷ್ಟತೆ ಇದೆ ಎಂದಾದಲ್ಲಿ ಆತನ ಗುರಿಯೂ ಸ್ಪಷ್ಟವಾಗಿದೆ ಎಂದೇ ಅರ್ಥ.

ಮುಂದಿನ ಭಾಗದಲ್ಲಿ ಇನ್ನಷ್ಟು ತಿಳಿಯೋಣ.




-



ಕಾಮೆಂಟ್‌ಗಳು

  1. ಸಂದೇಹವು ಪ್ರಶ್ನೆಯಾಗಲಾರದು ಎನ್ನುವುದನ್ನು ಚೆನ್ನಾಗಿ ತಿಳಿಸಿದ್ದೀರಿ. ‘ಅನಾತ್ಮ’ ಎನ್ನುವುದು ನನ್ನನ್ನು ಗೊಂದಲಕ್ಕೀಡು ಮಾಡಿದೆ. ಮುಂದಿನ ಭಾಗದಲ್ಲಿ ನನ್ನ ಗೊಂದಲದ ಪರಿಹಾರವನ್ನು ತಿಳಿಯಲು ಕಾತರನಾಗಿದ್ದೇನೆ.

    ಪ್ರತ್ಯುತ್ತರಅಳಿಸಿ
  2. ಕಾಕಾ,

    ಧನ್ಯವಾದಗಳು.
    ಆತ್ಮ ಮತ್ತು ಅನಾತ್ಮದ ಬಗೆಗಿನ ವಿವರಣೆಗಳು ಇನ್ನೂ ೨೦-೩೦ ಸೂಕ್ತಿಗಳ ನಂತರ ಬರಲಿದೆ. ಕ್ರಮಬದ್ದವಾಗಿ ಒಂದೊಂದೇ ಪ್ರಶ್ನೆಯನ್ನು ತೆಗೆದುಕೊಂಡು ಉತ್ತರಿಸುತ್ತಾ ಹೋಗಿರುವುದರಿಂದ ವಿಷಯವು ವಿಸ್ತಾರವಾಗಿದೆ.
    "ಕಾಯುವಿಕೆಗಿಂತನ್ಯ ತಪವು ಇಲ್ಲ" ಎಂಬಂತೆ ತಾವು ಕಾಯುವಿರೆಂಬ ಭರವಸೆ ನನಗಿದೆ :) .

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ